ನಾನು ನಿಧನವಾಗಿಬಿಟ್ಟೆ.....
ಭೂತವೆಂಬ ಸಮಾಧಿಯಲ್ಲಿ ನನ್ನ ಹೂಳ ಹೊರಟಿರಿ.
ನನ್ನ ಈ ಉತ್ಕ್ರಮಣ,ದುರ್ಬಲದ ಸಂಕ್ರಮಣ
ನನ್ನ ನೋವ ಉದಧಿಯಾಗಿ ಮಾಡಿಬಿಟ್ಟಿರಿ.
ಪರಂಪರೆಯ ಸ್ವಾರ್ಥಗಳ ಎಳ್ಳು ಹಾಕಿ
ಪೂರ್ವಾಗ್ರಹದ ಅಕ್ಕಿ ಬೆರೆಸಿ
ನನ್ನ ಬಾಯ ಅಂದು ನೀವು ಮುಚ್ಚಿಬಿಟ್ಟಿರಿ
ಪುರಾತನದ ನೀರು ಸುರಿದು
ಬೇಧವೆಂಬ ಬಟ್ಟೆ ಹೊಡೆಸಿ
ಮೌಡ್ಯತೆಯ ಚಟ್ಟಕ್ಕೆನ್ನ ಹೊರೆಸೆಬಿಟ್ಟಿರಿ
ಅವರು ಇವರು ನೀವು ತಾವು
ನಾಕು ಜನರು ಹೆಗಲುಗೊಟ್ಟು
ಮೌನವೆಂಬ ಮೆರವಣಿಗೆಯಲ್ಲಿ
ಮಸಣಕೆನ್ನ ತಂದೆಬಿಟ್ಟಿರಿ
ಮೊದಲೇ ಅಗೆದು ತೆಗೆದು ಇಟ್ಟ ಗುಂಡಿಯಲ್ಲಿ....ನನ್ನ.
ಹೇಳ ಹೆಸರು ಇಲ್ಲದೇನೆ
ಐಬುಗಳ ಮಣ್ಣು ಸುರಿದು...ಮುಚ್ಚಿಬಿಟ್ಟಿರಿ..
ಹೊಸತಾಗಿ ಬಾಳದೆಯೇ
ನನ್ನನ್ನು ಅರಿಯದೆಯೇ...
ಎಲ್ಲರಂತೆ ನಾನು ಅಂದು..
'ನಿಧಾನವಾದೆನು'.....ನಿಧನವಾಗಿಬಿಟ್ಟೆನು....!!